ನವದೆಹಲಿ: ಜನರಿಗೆ ಅನುಕೂಲವಾಗಲಿ, ಇಲ್ಲದವರು, ಕಡು ಬಡವರಿಗೆ ಸೌಲಭ್ಯ ತಲುಪಲಿ ಎಂದು ಅನೇಕ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತರುತ್ತವೆ. ಸರ್ಕಾರ ಜಾರಿಗೆ ತಂದ ಯೋಜನೆಗಳು ಅರ್ಹರನ್ನು ಸರಿಯಾಗಿ ತಲುಪುವುದೇ ಇಲ್ಲ.
ಅರ್ಹರಿಗೆ ಯೋಜನೆ ತಲುಪುತ್ತಿಲ್ಲ ಎಂಬುದು ಒಂದು ಕಡೆಯಾದರೆ, ಮತ್ತೊಂದು ಕಡೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಯೋಜನೆಗಳನ್ನು ಕಬಳಿಸುವ ವ್ಯವಸ್ಥಿತ ಜಾಲವೇ ಇದೆ. ಇಂತಹ ಪ್ರಕರಣವೊಂದರ ವರದಿ ಇಲ್ಲಿದೆ ನೋಡಿ. ಕೋಲ್ಕತಾ ಪೋರ್ಟ್ ಟ್ರಸ್ಟ್ ನಿಂದ ಪಿಂಚಣಿ ಪಡೆಯುವವರ ಸಂಖ್ಯೆ 26,699. ಇವರಲ್ಲಿ 90ರಿಂದ 100 ವರ್ಷದವರು 404 ಮಂದಿ ಇದ್ದಾರೆ. ಇವರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತಿದೆ.
ಕೆಲವು ಪಿಂಚಣಿದಾರರು ಮೃತಪಟ್ಟರೂ, ಅವರ ಕುಟುಂಬದವರು ಬ್ಯಾಂಕ್ ಗೆ ತಿಳಿಸದೇ, ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ ಹಣ ಪಡೆದುಕೊಳ್ಳುತ್ತಿದ್ದರು. ಇದೀಗ ಇಂತಹ ಆಟಕ್ಕೆ ಅಧಿಕಾರಿಗಳು ಕಡಿವಾಣ ಹಾಕಿದ್ದಾರೆ.
ಆಧಾರ್ ಸಂಖ್ಯೆ ಜೊತೆಗೆ ಪಿಂಚಣಿದಾರರ ಖಾತೆ ಲಿಂಕ್ ಮಾಡುತ್ತಿದ್ದು, ಇದರಿಂದ ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆಯುತ್ತಿದ್ದ ಕುಟುಂಬದವರಿಗೆ ನುಂಗಲಾರದ ತುತ್ತಾಗಿದೆ. ನೌಕಾಯನ ಸಚಿವಾಲಯ. ಪೋರ್ಟ್ ಟ್ರಸ್ಟ್ ಅಧಿಕಾರಿಗಳು ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆಯಲು ಕಡಿವಾಣ ಹಾಕಿದ್ದಾರೆ.
ಆಧಾರ್ ಲಿಂಕ್ ಪೂರ್ಣಗೊಂಡ ಬಳಿಕ, ಎಷ್ಟು ಮಂದಿ ಈ ರೀತಿ ಹಣ ಪಡೆದುಕೊಳ್ಳುತ್ತಿದ್ದಾರೆ ಎಂಬುದು ಗೊತ್ತಾಗಲಿದೆ. ಸದ್ಯಕ್ಕೆ 5 ಪ್ರಕರಣ ಪತ್ತೆಯಾಗಿದೆ. ನಮ್ಮ ಉದ್ದೇಶ ಅರ್ಹರಿಗೆ ಹಣ ತಲುಪಬೇಕೆಂಬುದಾಗಿದೆ ಹೊರತು ಪ್ರೇತಾತ್ಮಗಳಿಗಲ್ಲ. ಇಷ್ಟು ದಿನ ಪಿಂಚಣಿ ಪಡೆಯುತ್ತಿದ್ದ ಪ್ರೇತಾತ್ಮಗಳಿಗೆ ಶಾಕ್ ಆಗಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.