ಒಬ್ಬ ಆಟಗಾರನಿಗೆ ತಾನು ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತರುವ ಕನಸಿರುತ್ತದೆ. ಇದರಿಂದ ಅವನ ಜೀವನವೂ ಸುಖಮಯವಾಗಿರುತ್ತದೆ. ಆದರೆ ಅದೆಷ್ಟೋ ಉತ್ತಮ ಪ್ರದರ್ಶನಗಳನ್ನು ನೀಡಿ ದೇಶಕ್ಕೆ ಹೆಸರು ತಂದುಕೊಟ್ಟ ರಾಜಸ್ಥಾನದ ಸಾಫ್ಟ್ ಬಾಲ್ ಆಟಗಾರನ ಜೀವನ ಸುಖಕರವಾಗಿಲ್ಲ. ಅವರು ಜೀವನ ನಿರ್ವಹಣೆಗೋಸ್ಕರ ವೇಯ್ಟರ್ ಕೆಲಸ ಮಾಡುತ್ತಿದ್ದಾರೆ.
ರಾಜಸ್ಥಾನದ ಶೋಯೆಬ್ ಖಾನ್ ಅವರಿಗೆ ರಾಷ್ಟ್ರೀಯ ಸಾಫ್ಟ್ ಬಾಲ್ ತಂಡದಲ್ಲಿ ಸ್ಥಾನ ಸಿಕ್ಕಿತ್ತು. ತಂದೆ ಆಟೋ ಚಾಲಕರಾಗಿದ್ದರು. ಸಂಸಾರ ನಡೆಸುವುದು ಕಷ್ಟವಾದರೂ ಶೋಯೆಬ್ ಆಸೆಗೆ ಅವರು ತಣ್ಣೀರೆರಚಲಿಲ್ಲ. ತಂದೆಯ ಪ್ರೋತ್ಸಾಹ ಹಾಗೂ ತಮ್ಮಲ್ಲಿದ್ದ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿದ ಶೋಯೆಬ್ ಮುಂದೊಂದು ದಿನ ಅಂತರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಪ್ರತಿಭೆಯಿಂದ ಖ್ಯಾತರಾದರು.
2010 ರಲ್ಲಿ ಮುಂಬೈನಲ್ಲಿ ಆಯೋಜಿಸಲಾಗಿದ್ದ ಸಾಫ್ಟ್ ಬಾಲ್ ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ಭಾರತ ತಂಡದ ಸದಸ್ಯರಾಗಿ ಕಂಚಿನ ಪದಕ ಗಳಿಸಿದರು. ಇದಕ್ಕೂ ಮುನ್ನ 2007 ರಿಂದ 2010 ರವರೆಗೆ ರಾಜಸ್ಥಾನ ತಂಡದ ನಾಯಕರಾಗಿದ್ದ ಶೋಯೆಬ್ ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಇಷ್ಟೆಲ್ಲ ಸಫಲತೆಗಳು ಸಿಕ್ಕಿದ್ದರೂ ಶೋಯೆಬ್ ಅವರ ಬಡತನವೇ ಅವರಿಗೆ ಶಾಪವಾಯ್ತು. ಇದರಿಂದಲೇ ಅವರಿಗೆ ವಿದೇಶಗಳಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಭಾರತೀಯ ತಂಡದ ಸದಸ್ಯತ್ವ ಪಡೆಯಲು ಸಾಧ್ಯವಾಗಲಿಲ್ಲ. ಅರ್ಜೆಂಟಿನಾ, ಭೂತಾನ್ ಮತ್ತು ಮಲೇಷಿಯಾಗಳಲ್ಲಿ ನಡೆಯುವ ಸಾಫ್ಟ್ ಬಾಲ್ ಆಟದಲ್ಲಿ ಭಾಗವಹಿಸುವ ಅವಕಾಶ ಕೈತಪ್ಪಿಹೋಯಿತು.
ಆಟದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ಸರಕಾರ ಭೂಮಿ, ಪೆಟ್ರೋಲ್ ಪಂಪ್, ಸ್ಕಾಲರ್ ಶಿಪ್ ಮುಂತಾದ ಸೌಲಭ್ಯಗಳನ್ನು ಒದಗಿಸುತ್ತದೆ. ಆದರೆ ಶೋಯೆಬ್ ಮಾತ್ರ ಇವೆಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸರಕಾರ ಇವರಿಗೆ ಯಾವುದೇ ರೀತಿಯ ಸಹಾಯ, ಪ್ರೋತ್ಸಾಹ, ಸೌಲಭ್ಯಗಳನ್ನು ಒದಗಿಸಿಲ್ಲ. ಹಾಗಾಗಿ ಕಳೆದ ಎರಡು ವರ್ಷದಿಂದ ಶೋಯೆಬ್ ಜೋಧಪುರದ ಒಂದು ರೆಸ್ಟೋರೆಂಟ್ ನಲ್ಲಿ ವೇಯ್ಟರ್ ಕೆಲಸ ಮಾಡುತ್ತಿದ್ದಾರೆ.