ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿದೆ ಎನ್ನಲಾಗಿರುವ ಖ್ಯಾತ ನಟ ದರ್ಶನ್ ಅವರ ನಿವಾಸ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರ ಮಾಲೀಕತ್ವದ ಎಸ್.ಎಸ್. ಆಸ್ಪತ್ರೆ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಂಕರ್, ಅಕ್ಟೋಬರ್ 17 ರಂದು ವಿಶೇಷ ಜಿಲ್ಲಾಧಿಕಾರಿ ಹೇಮಾಜಿ ನಾಯಕ್ ತೆರವು ಕುರಿತಂತೆ ಆದೇಶ ಹೊರಡಿಸಲಿದ್ದಾರೆಂದು ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಐಡಿಯಲ್ ಹೋಮ್ಸ್ ಸಂಸ್ಥೆಯಿಂದ ಅಭಿವೃದ್ದಿಪಡಿಸಲಾಗಿದ್ದ ಲೇ ಔಟ್ ನಲ್ಲಿ ಈ ನಿವೇಶನ ಪಡೆದಿದ್ದ ನಟ ದರ್ಶನ್ ಸೇರಿದಂತೆ ಸುಮಾರು 69 ಮಂದಿ ಇಲ್ಲಿ ವಾಸ ಹಾಗೂ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿದ್ದರು. ಆದರೆ ಸರ್ವೇ ವೇಳೆ ರಾಜಕಾಲುವೆ ಹಾಗೂ ಸರ್ಕಾರಿ ಜಾಗ ಒತ್ತುವರಿಯಾಗಿರುವುದು ಕಂಡು ಬಂದಿತ್ತು. ಮರು ಸರ್ವೇಯಲ್ಲೂ ಈ ಜಾಗ ಸರ್ಕಾರಕ್ಕೆ ಸೇರಿದೆ ಎಂಬ ಅಂಶ ಕಂಡು ಬಂದ ಕಾರಣ ಅಂತಿಮವಾಗಿ ಒಟ್ಟು ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.