ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಾಮಾನ್ಯರಂತೆ ಮಾರುಕಟ್ಟೆಗೆ ತೆರಳಿ ಶಾಪಿಂಗ್ ಮಾಡಿದ್ದಾರೆ. ಅಲ್ಲದೇ ಟೊಮಾಟೋ, ಸೌತೆಕಾಯಿ ಸೇರಿದಂತೆ ಸುಮಾರು 200 ರೂ. ಬೆಲೆಯ ತರಕಾರಿಯನ್ನು ಖರೀದಿಸಿದ್ದಾರೆ.
ಮಧ್ಯವರ್ತಿಗಳಿಲ್ಲದೆ ರೈತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ಮಹಾರಾಷ್ಟ ಸರ್ಕಾರ, ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದ ಹಲವೆಡೆ ಮಾರುಕಟ್ಟೆಯನ್ನು ಆರಂಭಿಸಲು ಅವಕಾಶ ನೀಡಿದೆ. ಪುಣೆಯಲ್ಲಿ 27, ನಾಗ್ಪುರದಲ್ಲಿ 3 ಹಾಗೂ ಥಾಣೆಯಲ್ಲಿ ಒಂದು ಮಾರುಕಟ್ಟೆಯನ್ನು ಸ್ಥಾಪಿಸಲಾಗಿದ್ದು, ವಿಧಾನ ಭವನದಲ್ಲಿ ಇದರ ಶಾಖೆಯನ್ನು ತೆರೆಯಲಾಗಿದೆ.
ಇಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತರಕಾರಿ ಖರೀದಿಸಿದ್ದಾರೆ. ಬಳಿಕ ಮಾತನಾಡಿದ ಅವರು, ರೈತರು ತಾವು ಬೆಳೆಯುವ ಬೆಳೆಗೆ ನ್ಯಾಯಯುತ ಬೆಲೆ ದೊರೆಯಬೇಕೆಂಬ ಕಾರಣಕ್ಕೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಮಳಿಗೆಗಳನ್ನು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲೆಡೆಯೂ ಆರಂಭಿಸಲಾಗುವುದೆಂದು ತಿಳಿಸಿದರಲ್ಲದೇ ಇದರಿಂದ ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.